ಮದುವೆಗೆ ಯಾರ ಒಪ್ಪಿಗೆ ಬೇಕು? (ವಿಜಯ ಕರ್ನಾಟಕ)

   



       ಅವಳಿಗೆ ಮನೆಯಲ್ಲಿ ಉಸಿರಾಡಲೂ ಸಹ ಆಗದ ಹಾಗೆ ಮಾಡಿ ಬಿಟ್ಟಿದ್ದರು. ಒಬ್ಬೊಬ್ಬ ಗಂಡು ಬಂದು ನೋಡಿಕೊಂಡು ಹೋದಾಗಲೂ ಮನೆಯ ಎಲ್ಲರ ದೃಷ್ಟಿ ಅವಳ ಮೇಲೆ. ಅವಳ ಅದೃಷ್ಟವೋ ಅಥವಾ ದುರಾದೃಷ್ಟವೋ ಗೊತ್ತಿಲ್ಲ ಬಂದ ಗಂಡುಗಳೆಲ್ಲಾ ಅವಳನ್ನು ಒಪ್ಪಿಕೊಂಡು ಬಿಡುತ್ತಿದ್ದರು. ಈಗ ಚೆಂಡು ಅವಳ ಅಂಗಳದಲ್ಲಿ!! ಅವಳು ಹೂ ಎನ್ನಲೂ ಆಗದೇ ಉಹುಂ ಎನ್ನಲೂ ಆಗದೇ ಕಣ್ಣು ಕಣ್ಣು ಬಿಡುತ್ತಿದ್ದಳು.

ಕಾಲ ಬದಲಾಗಿದೆ ನಿಜ.

ಮೊದಲಾಗಿದ್ದರೆ ಮದುವೆಯ ವಿಚಾರದಲ್ಲಿ ಹೆಣ್ಣುಮಕ್ಕಳ ಅಭಿಪ್ರಾಯ ಕೇಳುತ್ತಲೇ ಇರಲಿಲ್ಲ. ಆದರೆ ಈಗ ಅವಳ ತೀರ್ಮಾನವೇ ಅಂತಿಮ. ಅವಳ ಇಷ್ಟಕ್ಕೆ ವಿರುದ್ಧವಾಗಿ ಯಾರೂ ಆಕೆಯನ್ನು ಯಾರಿಗೂ ಮದುವೆ ಮಾಡಿ ಕೊಡಲು ಸಾಧ್ಯವಿಲ್ಲ. ಆದರೆ ತನ್ನಿಷ್ಟದ ಗಂಡು ಸಿಗುವವರೆಗೂ ಕಾಯುವ ತಾಳ್ಮೆ ಆಕೆಗೆ ಇರುವಷ್ಟು ಮನೆಯವರಿಗಿಲ್ಲ. ಅವರಿಗೆ ಒಟ್ಟು ತಮ್ಮ ಮನೆಯ ಹೆಣ್ಣುಮಗಳು ಮದುವೆಯಾಗಿ ಗಂಡನ ಮನೆಗೆ ಹೋಗಿ ಬಿಡಬೇಕಷ್ಟೇ. ಮದುವೆ ಎಂಬ ಒಂದು ಪದವೇ ಹೆಚ್ಚಿನದು ಅವರಿಗೆ. "ಮಗಳಿಗೆ ಇನ್ನೂ ಮದುವೆ ಮಾಡಿಲ್ವಾ?" ಎಂಬ ಜನರ ಕೊಂಕು ಮಾತನ್ನು ತಪ್ಪಿಸಿಕೊಳ್ಳಬೇಕು ಎನ್ನುವುದೊಂದೇ ಅವರ ಉದ್ದೇಶ. ಹೇಗಿದ್ದರೂ ಮದುವೆಯಾದ ಮೇಲೆ ಎಲ್ಲವೂ ಸರಿಯಾಗುತ್ತೆ ಎಂಬ ಆಶಾಭಾವ ಅವರದ್ದು.

ಆದರೆ ಆಕೆಯ ಭಾವವೇ ಬೇರೆ.

ಮದುವೆಯ ನಂತರವೇ ತನ್ನ ನಿಜವಾದ ಜೀವನ ಶುರುವಾಗುತ್ತದೆ ಎಂಬ ಅರಿವು ಆಕೆಗಿದೆ. ಬೆಳಿಗ್ಗೆ ತಡವಾಗಿ ಏಳುವ ತನ್ನ ದಿನಚರಿ ಮದುವೆಯ ನಂತರ ಬದಲಾಗುತ್ತದೆ, ತನಗಿಷ್ಟ ಬಂದದ್ದು ಮಾಡುವ ಹಕ್ಕು, ತಿಂಡಿ ಮಾಡಲು ಬೇಸರವಾದರೆ ಮ್ಯಾಗಿ ಮಾಡಿಕೊಳ್ಳುವ ಸ್ವಾತಂತ್ರ ಹೊರಟು ಹೋಗುತ್ತದೆ ಎಂಬುದು ಆಕೆಯ ಆತಂಕ. ಈಗ ಯಾರಪ್ಪಣೆಯನ್ನೂ ಕೇಳದವಳು ನಂತರ ಎಲ್ಲಿಗೇ ಹೋಗಬೇಕೆಂದರೂ ಗಂಡನ ಅಪ್ಪಣೆ ಕೇಳಬೇಕಾಗುತ್ತದೆ ಎಂಬೆಲ್ಲಾ ಯೋಚನೆಗಳು ಆಕೆಯ ತಲೆಯಲ್ಲಿ ನರ್ತಿಸುತ್ತವೆ. ಈ ಯೋಚನೆಗಳು ಆಕೆಯ ಬಿಪಿ ಏರಿಸಿ ಮನಸ್ಸಿನ ಜೊತೆ ದೇಹವೂ ತಾಳ ತಪ್ಪುವಂತೆ ಮಾಡುತ್ತದೆ.

ಆದರೆ ತಾನೂ ಓದಿರುವುದರಿಂದ, ಆರ್ಥಿಕವಾಗಿ ಸ್ವಾವಲಂಬಿ ಆಗಿರುವುದರಿಂದ ಎಂತಹದ್ದೇ ಗಂಡು ಬಂದರೂ ಪ್ರಸಾದವೆಂಬಂತೆ ಕಣ್ಣಿಗೊತ್ತಿಕೊಂಡು ಮದುವೆಯಾಗಬೇಕಾದ ಅವಶ್ಯಕತೆಯೂ ತನಗೆ ಇಲ್ಲ ಎಂಬ ಅರಿವೂ ಆಕೆಗಿದೆ. ತನ್ನ ಇಚ್ಛೆಗೆ ತಕ್ಕಂತಹ, ತನಗೆ ಹೊಂದುವಂತಹ, ತನಗಿಂತ ಹೆಚ್ಚು ಓದಿರುವ, ಹೆಚ್ಚು ಸಂಬಳ ತರುವ, ನೋಡಲು ಚಂದ ಇರುವ ಹುಡುಗನನ್ನು ಆಕೆ ಬಯಸುವುದು ಸಹಜವಾಗಿದೆ. ಇದಕ್ಕಿಂತಲೂ ಹೆಚ್ಚಾಗಿ ತನ್ನ ಮನಸ್ಥಿತಿಗೆ ಹೊಂದುವಂತಹ ಗಂಡು ಬೇಕಿದೆ ಆಕೆಗೆ.

ತನ್ನ ಮತ್ತು ತನ್ನ ಆರೋಗ್ಯದ ಬಗ್ಗೆ ಪೂರ್ತಿ ಕಾಳಜಿ ಇರುವ, ತನಗೆ ಅಡುಗೆ ಮಾಡಲಾಗಲಿಲ್ಲವೆಂದರೆ ಅದನ್ನೇ ಒಂದು ರಂಪ ಮಾಡದೇ ಹೋಟೆಲ್ಲಿನಿಂದ ತನಗೂ ಸೇರಿಸಿ ಪಾರ್ಸೆಲ್ ತರುವ, ಹಬ್ಬ-ಹರಿದಿನಗಳಂದು ಸೀರೆ ಉಟ್ಟುಕೋ ಎಂದು ಗೋಗರೆಯದಿರುವ, ತಾನು ಹೇಗಿದ್ದರೂ ತನ್ನನ್ನು ಒಪ್ಪುವ ಆತ್ಮಸಂಗಾತಿಯ ಹುಡುಕಾಟದಲ್ಲಿದ್ದಾಳೆ ಆಕೆ. ಒಂದೇ ರೀತಿಯ ಅಭಿರುಚಿ ಇರುವವರು ಸಿಗುವುದು ಕಷ್ಟ ನಿಜ. ಆದರೆ ಮತ್ತೊಬ್ಬರ ಅಭಿರುಚಿಯನ್ನು ಗೌರವಿಸುವವರಾದರೂ ಸಿಗಬೇಕಲ್ಲವೇ? ಒಂದೋ ಅಥವಾ ಎರಡೋ ಭೇಟಿಗಳಲ್ಲಿ ಅವನ ಪೂರ್ತಿ ಮನಸ್ಸನ್ನು ಬಗೆದು  ನೋಡಲು ಸಾಧ್ಯವೇ?

ಮನೆಯವರಿಗೆ ಅದೆಲ್ಲಾ ಅರ್ಥವಾಗೋಲ್ಲ. ಹುಡುಗ ಒಳ್ಳೆಯ ಕೆಲಸದಲ್ಲಿದ್ದರೆ, ನೋಡಲು ಚಂದ ಇದ್ದರೆ ಸಾಕು. ತಮಗೆ ಇಷ್ಟವಾಗುವ ಹುಡುಗ ಇವಳಿಗ್ಯಾಕೆ ಇಷ್ಟವಾಗೋಲ್ಲ ಅಂತ ಅವರ ಗೊಣಗಾಟ. ಎರಡು ದಿನವಲ್ಲದಿದ್ರೆ ಒಂದು ವಾರ ಸಮಯ ತೆಗೆದುಕೋ, ಹುಡುಗನ ಬಗ್ಗೆ ಯೋಚಿಸಿ ಹೇಳು ಅಂತ ಅವರ ಆಜ್ಞೆ. ಆದರೆ ಅವನೊಡನೆ ಜೀವನಪೂರ್ತಿ ಇದ್ದು ಸಂಸಾರ ಮಾಡಬೇಕಾದವಳು ಅವಳು. ಒಂದೇ ವಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದಾ? ಸಿನೆಮಾಗಳಲ್ಲಿ ನಾಯಕ ನಾಯಕಿಯರ ಮದುವೆಯಾದ ನಂತರ ಶುಭಂ ಎಂದು ತೋರಿಸುತ್ತಾರೆ. ಆದರೆ ನಿಜ ಜೀವನದಲ್ಲಿ ಮದುವೆಯಾದ ನಂತರವೇ ನಿಜವಾದ ಬದುಕು ಶುರುವಾಗುತ್ತದೆ. ಈಗಿನ ದಿನಗಳಲ್ಲಿ ಗಂಡ-ಹೆಂಡತಿ ಇಬ್ಬರೂ ತಮ್ಮ ತಮ್ಮ ಪೋಷಕರಿಂದ ದೂರ ಇರುತ್ತಾರಾದ್ದರಿಂದ ಇವರಿಬ್ಬರ ನಡುವೆ ಹುಟ್ಟುವ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ದೂರ ಮಾಡಲು ಯಾರೂ ಮಧ್ಯಸ್ಥಿಕೆ ವಹಿಸುವವರು ಇರುವುದಿಲ್ಲ. ಪರಿಣಾಮ ಚಿಕ್ಕ ವಿಷಯಕ್ಕೇ ದಂಪತಿಗಳು ಮನಸ್ಸನ್ನು ರಾಡಿಯೆಬ್ಬಿಸಿಕೊಂಡು ದೂರವಾಗುತ್ತಾರೆ. ಹೆಸರಿಗೆ ಒಂದೇ ಸೂರಿನಡಿ ಇದ್ದರೂ  ಮನಸ್ಸುಗಳು ಕಿಲೋಮೀಟರುಗಟ್ಟಲೆ ದೂರ ಇರುತ್ತವೆ.

ಹಾಗಾಗಿ ಈಗಿನ ಹೆಣ್ಣುಮಕ್ಕಳು ತಾವು ಮದುವೆಯಾಗಬೇಕಾದ ಹುಡುಗರನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾರೆ. ಅವನು ಏಳುವ, ಕೂರುವ ಸ್ಟೈಲಿನಿಂದ ಹಿಡಿದು ಎದುರಿಗೊಬ್ಬ  ಭಿಕ್ಷುಕ ಭಿಕ್ಷುಕ ಬಂದರೆ ಇವನ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನೂ ಸಹ ಗಮನಿಸುತ್ತಾರೆ. ನೋಡಲು ಸ್ಮಾರ್ಟ್ ಇರುವ ಹುಡುಗ ಅಂತರಂಗದಲ್ಲಿ ಕಡು ಜಿಪುಣ ಆಗಿರಬಹುದು ಅಥವಾ ಚೆನ್ನಾಗಿಯೇ ಮಾತುಕಥೆಯನ್ನಾಡುವ ಹುಡುಗ ಮನದೊಳಗೆ ಅನುಮಾನದ ಪಿಶಾಚಿಯಾಗಿರಬಹುದು. ಇವೆಲ್ಲವೂ ಒಂದು ಅಥವಾ ಎರಡು ಭೇಟಿಯಿಂದ ಗೊತ್ತಾಗುವ ವಿಷಯವಲ್ಲ. ಒಂದು ಬಾರಿ ಈ ವಿಷಯದಲ್ಲಿ ಎಡವಿದರೆ ಜೀವನ ಪೂರ್ತಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಅಂತ ಅವರ ನಿಲುವು. ಹಾಗಾಗಿ ಹುಡುಗಿಯರು ತಮ್ಮ ನಿರ್ಧಾರ ಬೇಗ ಹೇಳದೇ ಸತಾಯಿಸುತ್ತಾರೆ.

ಅವರು ಹಿಡಿಸದಿದ್ದರೆ ಮತ್ತೇನೂ ಹೇಳಲು ತೋಚದೇ ಅವನ ಹುಬ್ಬು ಚಂದವಿಲ್ಲ, ನಕ್ಕರೆ ಹಲ್ಲು ಹೊರಗಿಣುಕುತ್ತದೆ, ಹೇರ್ ಸ್ಟೈಲ್ ಚಂದ ಇಲ್ಲ ಅಂತ ಬಾಯಿಗೆ ಬಂದ ಹಾಗೆ ವಿವರಣೆ ಕೊಡುತ್ತಾರೆ. ಅವರು ಏನೇ ಕಾರಣ ಕೊಡಲಿ ಅವರಿಗಿಷ್ಟ ಇಲ್ಲ ಎಂದಮೇಲೆ ಮುಗಿಯಿತು. ಮುಂದೆ ಅದರ ಬಗ್ಗೆ ಮಾತನಾಡದಿರುವುದೇ ಉತ್ತಮ. ಯಾಕೆ ಇಷ್ಟವಾಗಲಿಲ್ಲ ಎಂದು ಮತ್ತೆ ಮತ್ತೆ ಕೆಣಕಿದರೆ ಅವರು ಖಿನ್ನತೆಗೆ ಜಾರಬಹುದು. ತಮಗಿಷ್ಟವಾದವರನ್ನು ಮದುವೆಯಾಗುವ ಅಧಿಕಾರ ಅವರಿಗೆ ಇದೆಯಲ್ಲವೇ? ಹಾಗೆಯೇ ಇಷ್ಟವಿಲ್ಲದಿರುವವರನ್ನು ಬೇಡ ಎನ್ನುವ ಅಧಿಕಾರವೂ ಅವರಿಗಿದೆ. ಮದುವೆಗೆ ಗಂಡಿನ ಒಪ್ಪಿಗೆ ಎಷ್ಟು ಮುಖ್ಯವೋ ಹೆಣ್ಣಿನದ್ದೂ ಅಷ್ಟೇ ಮುಖ್ಯ. ಅವಳಿಗೆ ಇಷ್ಟವಿಲ್ಲದಿದ್ದರೂ ಮದುವೆ ಮಾಡಿದರೆ ನಾಳೆಯ ದಿನ ಕಣ್ಣೀರು ಹರಿಸುವುದು ನಮ್ಮ ಮನೆಯ ಮಗಳೇ.... ನೆನಪಿರಲಿ.
                **********
ಕೆ.ಎ.ಸೌಮ್ಯ
Published in Vijaya Karnataka on 03.03.2019

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)