ಕೋಡಿಮಠದ ಶಾಸನದ ಭಾಷಿಕ ಮತ್ತು ಸಾಹಿತ್ಯಿಕ ಮಹತ್ವ

 ಪೀಠಿಕೆ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯ ಕೇದಾರೇಶ್ವರ ದೇವಸ್ಥಾನದ ಪ್ರಾಕಾರದಲ್ಲಿ ಇರುವ ಅನೇಕ ಶಿಲಾಶಾಸನಗಳಲ್ಲಿ ಇದೂ ಒಂದು. 


                 ಶಾಸನ   : ಕೋಡಿಮಠದ ಶಾಸನ
ಶಾಸನ ದೊರೆತ ಸ್ಥಳ : ಶಿವಮೊಗ್ಗ ಜಿಲ್ಲೆಯ  
                                  ಶಿಕಾರಿಪುರ 
                                 ತಾಲ್ಲೂಕಿನ ಬಳ್ಳಿಗಾವೆ
       ಶಾಸನದ ಕಾಲ  : ಕ್ರಿ ಶ 12 ನೇ ಶತಮಾನ
    ಶಾಸನದ ಎತ್ತರ   : 8 ಅಡಿ ಎತ್ತರ
                               4  ಅಡಿ 3 ಅಂಗುಲ ಅಗಲ
   ಕಂಡುಹಿಡಿದವರು  : ಬಿ. ಎಲ್. ರೈಸ್
   ಪ್ರಕಟಿಸಿದ ವರ್ಷ   : 1902

ಶಾಸನವು ಶಿವನಮನದ ಮೂಲಕ ಆರಂಭವಾಗುತ್ತದೆ. ನಂತರ ಶಿವನು ದೊರೆ ಬಿಜ್ಜಳನ ಆಸೆಗಳನ್ನು ಪೂರೈಸಲಿ ಎಂಬ ಆಶಯ ಪದ್ಯವಿದೆ. ಕಲಚುರಿ ದೊರೆ ಬಿಜ್ಜಳನ ಬಿರುದುಗಳನ್ನು ಕೂಡ ಶಾಸನ ತಿಳಿಸುತ್ತದೆ. 

'ಕಸಪಯ್ಯ ನಾಯಕ' ಬಿಜ್ಜಳನ ಕೈ ಕೆಳಗಿನ ಅಧಿಕಾರಿ. ಆತನನ್ನು ಬಣ್ಣಿಸುವ ಹಲವು ಪದ್ಯಗಳಿವೆ. ನಂತರ ಶಾಸನವು ಬಳ್ಳಿಗಾವೆಯ ಕೋಡಿಮಠದ ಶ್ರೇಷ್ಠತೆಯ ಬಗ್ಗೆ ತುಂಬಾ ಮನೋಹರವಾಗಿ ವರ್ಣಿಸುತ್ತದೆ. ದೊರೆ ಬಿಜ್ಜಳನು ದಕ್ಷಿಣದ ವಿಜಯ ಕೈಗೊಂಡು, ಬಳ್ಳಿಗಾವೆಯಲ್ಲಿ ಬೀಡು ಬಟ್ಟಾಗ ಎಲ್ಲಾ ಅಧಿಕಾರಿಗಳು ಒಂದುಗೂಡಿ ಬಿಜ್ಜಳನನ್ನು ಕಂಡರು. 

ಕಸಪಯ್ಯ ನಾಯಕನು ಮಠದ ಹಿರಿಮೆಯನ್ನು ದೊರೆಗೆ ತಿಳಿಸಿದನು. ನಂತರ ಅಂತಹ ಮಹಿಮಾನ್ವಿತ ಸ್ಥಳದಲ್ಲಿ ಧರ್ಮಕಾರ್ಯವೊಂದನ್ನು ಮಾಡುವಂತೆ ದೊರೆಯಲ್ಲಿ ಭಿನ್ನವಿಸಿಕೊಳ್ಳುತ್ತಾನೆ. ಅವನ‌ ಕೋರಿಕೆಗೆ ಸ್ಪಂದಿಸಿದ ಬಿಜ್ಜನು, ವಾಮಶಕ್ತಿ ಮುನಿಯ ಕಾಲು ತೊಳೆದು, ಕಿರಿಗೇರಿ ಗ್ರಾಮವನ್ನು ದಕ್ಷಿಣ ಕೇದಾರೇಶ್ವರ ದೇವಾಲಯದಲ್ಲಿನ ಪೂಜೆಗೆ, ಋಷಿಗಳ ಸೇವೆಗೆ, ದೇವಸ್ಥಾನದ ದುರಸ್ತಿ ಕಾರ್ಯ, ಅನ್ನ ಸಂತರ್ಪಣೆ ಹಾಗೂ ವಿದ್ಯಾಭ್ಯಾಸಕ್ಕೆ ನೀಡುತ್ತಾನೆ. 

ಪ್ರಸ್ತುತ ಶಾಸನವು ಕಲಚುರಿ ದೊರೆ ಬಿಜ್ಜಳನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ. ಅಲ್ಲದೇ ಬಳ್ಳಿಗಾವೆಯು ಕ್ರಿ.ಶ 11 ನೇ ಮತ್ತು ಕ್ರಿ.ಶ 12 ನೇ ಶತಮಾನದಲ್ಲಿ ಅತ್ಯಂತ ಪ್ರಸಿದ್ಧಿ ಹೊಂದಿದ ಸ್ಥಳವಾಗಿತ್ತು, ದೊಡ್ಡ ಪಟ್ಟಣವಾಗಿ ಖ್ಯಾತ ವಿದ್ಯಾಕೇಂದ್ರವಾಗಿ ಮೆರೆಯುತ್ತಿತ್ತು ಎಂದು ಶಾಸನಗಳಿಂದ ತಿಳಿದು ಬರುತ್ತದೆ. 

ಭಾಷಿಕ ಮತ್ತು ಸಾಹಿತ್ಯಿಕ ಮಹತ್ವ

ಪ್ರಸ್ತುತ ಶಾಸನದ ಬಹುಭಾಗ ಸಂಸ್ಕೃತದಲ್ಲಿಯೂ ಹಾಗೂ ಉಳಿದ ಭಾಗ ಕನ್ನಡದಲ್ಲಿಯೂ ರಚಿತವಾಗಿದೆ. ಸಾಮಾನ್ಯವಾಗಿ ಈ ಕಾಲದ ಶಾಸನಗಳಲ್ಲಿ ಕಂಡುಬರುವ ಆಡಂಬರದ ಅಲಂಕಾರಿಕ ಶೈಲಿಯೇ ಇಲ್ಲಿಯೂ ಕಂಡು ಬರುತ್ತದೆ. ಶಾಸನವು ಗದ್ಯ ಪದ್ಯಗಳೆರೆಡಲ್ಲಿಯೂ, ಅದರಲ್ಲೂ ಪದ್ಯಗಳೇ ಅಧಿಕವಾಗಿ ಪ್ರೌಢ ಚಂಪೂ ಶೈಲಿಯಲ್ಲಿ ರಚಿತವಾಗಿದೆ. ಆದರೆ ಶಾಸನದ ಕವಿಯ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ.

ಶಾಸನದ ಪಾಠ ಪೂರ್ಣವಾಗಿ ಲಭ್ಯವಾಗಿದೆ. 

ಶಾಸನದ ಭಾಷೆಯ ಕೆಲವು ವಿಶೇಷತೆಗಳು

  • ವಕಾರಕ್ಕೆ ಬದಲಾಗಿ ಬಕಾರ ಬಂದಿರುವುದುಂಟು (ಬ್ಯಾಪ್ತ, ಬ್ಯಾಖ್ಯಾನ, ಕಾಬ್ಯ, ಬ್ಯಾಕರಣ ಇತ್ಯಾದಿ)
  • ಲಕಾರಕ್ಕೆ ಬದಲಾಗಿ ಳಕಾರ ಬಂದಿರುವುದುಂಟು (ಜಾಳ, ಜಳ, ಫಳ, ಪ್ರಬಳ, ಸಕಳ- ಹಾಗೆಯೇ ಲಕ್ಷ್ಮಿ ಎಂಬ ಪದಕ್ಕೆ ಲಕುಮಿ ಎಂಬ ರೂಪವಿದೆ)
  • ಋಕಾರಕ್ಕೆ ಬದಲಾಗಿ ರಕಾರ (ದ್ರಿಢ, ಗ್ರಿಹ)
  • ರಕಾರಕ್ಕೆ ಬದಲಾಗಿ ಋಕಾರ (ಕೃಯಾ)
  • ಶಕಾರಕ್ಕೆ ಬದಲಾಗಿ ಸಕಾರ (ಯತ್ಸಿವ)
  • ಕೆಲವೆಡೆ ದ್ವಿತ್ವದ ಜೊತೆಗೆ ಅನುನಾಸಿಕವೂ ಸೇರಿದೆ (ಬಂಮ್ಮ)

ವಚನ ಅಥವಾ ಶಾಸನದ ಗದ್ಯ ಭಾಗದ ಶೈಲಿಯಲ್ಲಿ ನಡುಗನ್ನಡ ಭಾಷಾ ಶೈಲಿಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಕೋಡಿಮಠವನ್ನು ಕುರಿತ ವರ್ಣನಾ ಭಾಗದ ಗದ್ಯವಂತೂ ಸೊಗಸಾದುದಾಗಿದೆ. ಇದರಿಂದ ಶಾಸನ ಕವಿಯು ಪ್ರತಿಭಾಶಾಲಿಯಾಗಿದ್ದನು ಎಂದು ತಿಳಿದು ಬರುತ್ತದೆ. ಆತ ಬಳಸಿದ ವೃತ್ತಗಳು ತಮ್ಮ ವೈವಿಧ್ಯತೆಯಿಂದ ಗಮನ ಸೆಳೆಯುತ್ತದೆ. ಶಾಸನದಲ್ಲಿ ಕಂದ ಪದ್ಯಗಳೇ ಅಧಿಕವಾಗಿವೆ. ಅಲ್ಲದೇ ಶಾಸನದಲ್ಲಿ "ಪೂರ್ವಕಾಲದ ವ್ಯಾಕರಣ ಗ್ರಂಥಗಳನ್ನು ಉಲ್ಲೇಖಿಸಿರುವುದು" ಗಮನಾರ್ಹ ಅಂಶವಾಗಿದೆ. 

ಉಪಸಂಹಾರ

ಶಿವಸ್ತುತಿಯ ಮೂಲಕ ಆರಂಭವಾಗುವ ಈ ಶಾಸನ ಬಹಭಾಗ ಸಂಸ್ಕ್ರತದಲ್ಲಿದ್ದು, ಕೆಲವು ಭಾಗ ಮಾತ್ರ ಕನ್ನಡದಲ್ಲಿದೆ. ಶಾಸನದ ಶೈಲಿ ಪದ್ಯ ಮತ್ತು ಗದ್ಯ ಮಿಶ್ರಿತವಾದ ಪ್ರೌಢ ಚಂಪೂ ಶೈಲಿಯಲ್ಲಿದೆ. ಆದರೆ ಇದನ್ನು ರಚಿಸಿದ ಕವಿಯ ಉಲ್ಲೇಖ ಎಲ್ಲಿಯೂ ಇಲ್ಲ. ಈ ಶಾಸನದ ಪೂರ್ಣಪಾಠ ಲಭ್ಯವಾಗಿರುವುದು ನಮ್ಮ ಸುದೈವ ಎನ್ನಬೇಕು. ವಚನಗಳಲ್ಲಿ ಅಥವಾ ಶಾಸನದ ಗದ್ಯ ಭಾಗಗಳಲ್ಲಿ ನಡುಗನ್ನಡ ಭಾಷಾ ಶೈಲಿಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. 

(ವಿವಿಧ ಮೂಲಗಳಿಂದ)

********

ಕೆ.ಎ.ಸೌಮ್ಯ
ಮೈಸೂರು

**************
ಕೋಡಿಮಠದ ಶಾಸನದ ಭಾಷಿಕ ಮತ್ತು ಸಾಹಿತ್ಯಿಕ ಮಹತ್ವದ ಕುರಿತು ಚರ್ಚಿಸಿ
***************
(ಎಂ.ಎ.ಕನ್ನಡ 2010) 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)