ವಾಸ್ತವದ ರಾಜಮಾರ್ಗ : Realism

ಜಿ. ಎಸ್. ಅಮೂರ : 

ಜಿ.ಎಸ್. ಅಮೂರ ರವರು ಬೊಮ್ಮನಹಳ್ಳಿಯಲ್ಲಿ ಹುಟ್ಟಿದರು. ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಮತ್ತು ಯೇಲ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದರು. ಮಹಾರಾಷ್ಟ್ರ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಹೆಸರು  : ಜಿ. ಎಸ್. ಅಮೂರ

ಹುಟ್ಟಿದ ಸ್ಥಳ: ಬೊಮ್ಮನಹಳ್ಳಿ

ಹುಟ್ಟಿದ ದಿನಾಂಕ: 1925

ಕೃತಿಗಳು:  ಕೃತಿ ಪರೀಕ್ಷೆ, ಮಹಾಕವಿ ಮಿಲ್ಟನ್

ಜಿ.ಎಸ್.ಆಮೂರ ಅವರು ಕನ್ನಡದ ಮಹತ್ವದ ವಿಮರ್ಶಕರಾಗಿ ಹೆಸರಾಗಿದ್ದಾರೆ. ಪ್ರಸ್ತುತ ಲೇಖನವು "ಕನ್ನಡ ಕಾದಂಬರಿಯ ಬೆಳವಣಿಗೆ" ಎಂಬ ಪುಸ್ತಕದಲ್ಲಿ ಪ್ರಕಟವಾಗಿತ್ತು. ಎಚ್.ಎಸ್.ರಾಘವೇಂದ್ರರಾವ್ ಅವರು ಸಂಪಾದಕರಾಗಿರುವ "ಶತಮಾನದ ಸಾಹಿತ್ಯ ವಿಮರ್ಶೆ" ಎಂಬ ಪುಸ್ತಕದಿಂದ ಈ ಲೇಖನವನ್ನು ಪಠ್ಯಕ್ಕೆ ತೆಗೆದುಕೊಳ್ಳಲಾಗಿದೆ. ಕನ್ನಡ ಕಾದಂಬರಿಯ ಆರಂಭಿಕ ಹಂತಗಳಾದ ನವೋದಯ ಮತ್ತು ಪ್ರಗತಿಶೀಲ ನೆಲೆಗಳಲ್ಲಿ, ಪಾಶ್ಚಾತ್ಯ ಮತ್ತು ಭಾರತೀಯ ತತ್ತ್ವ ಚಿಂತನೆಗಳೆರಡನ್ನೂ ಸಮೀಕರಿಸಿ ವಿಶ್ಲೇಷಿಸಿರುವ ಈ ಲೇಖನ ವಿಮರ್ಶಾ ಬೆಳವಣಿಗೆಯಲ್ಲಿ ಮಹತ್ವದ ಮೈಲಿಗಲ್ಲು ಎಂದೇ ಭಾವಿಸಲಾಗಿದೆ. 

ಪೀಠಿಕೆ

ಜಿ.ಎಸ್.ಅಮೂರ ಅವರ "ಕನ್ನಡ ಕಾದಂಬರಿಯ ಬೆಳವಣಿಗೆ" ಎಂಬ ಪುಸ್ತಕದಿಂದ ಈ ಲೇಖನವನ್ನು ಆರಿಸಿಕೊಳ್ಳಲಾಗಿದೆ. ಕನ್ನಡ ಕಾದಂಬರಿಯ ಆರಂಭಿಕ ಹಂತಗಳ ಹಿನ್ನಲೆಯಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಐವತ್ತು, ಅರವತ್ತರ ದಶಕದಲ್ಲಿ ರಚಿತವಾದ ಕನ್ನಡ ಕಾದಂಬರಿಕಾರರ ಪ್ರಮುಖ ಕೃತಿಗಳನ್ನು ಪಾಶ್ಚಾತ್ಯ ಸಾಹಿತ್ಯ ಚಿಂತಕರ ಅಭಿಪ್ರಾಯಗಳ ಹಿನ್ನಲೆಯಲ್ಲಿ ಲೇಖಕರು ವಿಶ್ಲೇಷಿಸಿದ್ದಾರೆ. 

ಇಪ್ಪತ್ತನೆಯ ಶತಮಾನದಲ್ಲಿ ಸುಮಾರು 1930ರ ಹೊತ್ತಿಗೆ ಕನ್ನಡ ಕಾದಂಬರಿ ಪ್ರಯೋಗ ಸಹಜವಾದ ಅನಿಶ್ಚಿತತೆಯನ್ನು ಕಳೆದುಕೊಂಡು "ವಾಸ್ತವದ ರಾಜಮಾರ್ಗ" (Realism) ಅನ್ನು ಆಯ್ಸುಕೊಂಡಿತು ಎನ್ನುತ್ತಾರೆ ಲೇಖಕರು. 

ವಾಸ್ತವದ ಪ್ರಯೋಗಕ್ಕೆ ಮುಖ್ಯ ಕಾರಣ ಹತ್ತೊಂಬತ್ತನೆಯ ಶತಮಾನದ ಯುರೋಪಿಯನ್ ಕಾದಂಬರಿಯ ಪ್ರಭಾವ ಎಂದು ಗುರುತಿಸಲಾಗಿದೆ. ಇದರ ಜೊತೆಗೆ ಸ್ವದೇಶಿ ಚಳುವಳಿಯ ಮೂಲಕ ಭಾರತೀಯ ಲೇಖಕರು ತಮ್ಮ ಸಂಸ್ಕೃತಿಯ ಮೂಲದತ್ತ ತಮ್ಮ ಲಕ್ಷ್ಯವನ್ನು ತಿರುಗಿಸತೊಡಗಿದ್ದರು


ವಾಸ್ತವದ ರಾಜಮಾರ್ಗ

ಹತ್ತೊಂಬತ್ತನೆಯ ಶತಮಾನದ ಯುರೋಪಿಯನ್ ಕಾದಂಬರಿಯಲ್ಲಿ ನಡೆದ ಮಹತ್ವದ ಬದಲಾವಣೆ ಎಂದರೆ, ಕಾದಂಬರಿಯ ಕೇಂದ್ರ ಪ್ರಜ್ಞೆಯಿಂದ ಪರಿಸರದತ್ತ ಸರಿದುದು ಎಂದು ರಾಬರ್ಟ್ ಆಲ್ಟರ್ ಉಲ್ಲೇಖಿಸುತ್ತಾರೆ. 

"ವಾಸ್ತವದ ಮಾರ್ಗದ ಕಾದಂಬರಿ ಜನ್ಮ ತಾಳಿದ್ದೇ ಐತಿಹಾಸಿಕ ಕಾದಂಬರಿಯ ಗರ್ಭದಲ್ಲಿ" ಎಂದು ಹೇಳುತ್ತಾ, ರಾಬರ್ಟ್‌ ಆಲ್ಟರ್ ಅವರು ವಾಸ್ತವದ ಮಾರ್ಗ ಮತ್ತು ಐತಿಹಾಸಿಕ ಕಾದಂಬರಿಗಳ ನಡುವಿನ ಸಂಬಂಧದ ಮೇಲೆ ಬೆಳಕು ಚೆಲ್ಲುತ್ತಾರೆ. 

ಈ ವಿಚಾರಗಳ ಔಚಿತ್ಯ ಕನ್ನಡ ಸಾಹಿತ್ಯ ಸಂದರ್ಭಗಳಲ್ಲೂ ಉಂಟಾಗಿದೆ. ಗೋಕಾಕ್, ಕುವೆಂಪು ಮತ್ತು ಕಾರಂತರ ಕಾದಂಬರಿಗಳಲ್ಲಿ ಐತಿಹಾಸಿಕ ಪ್ರಜ್ಞೆಯೇ ಜೀವಾಳವಾಗಿದೆ‌. ಕೆರೂರು ವಾಸುದೇವಾಚಾರ್ಯರಂತಹ ಕೆಲವರು ವಾಸ್ತವದ ಮಾರ್ಗದಲ್ಲಿ ಕೆಲವು ಐತಿಹಾಸಿಕ ಕಾದಂಬರಿಗಳನ್ನು ‌ಬರೆದರು. ವಾಸ್ತವ ಮಾರ್ಗದ ಕಾದಂಬರಿ ಬೆಳೆಯುತ್ತಾ ಹೋದಂತೆ ಪರಿಸರದ ಬಗ್ಗೆ ಲಕ್ಷ್ಯ ಕೇಂದ್ರೀಕೃತವಾಯ್ತು. 

ಹೀಗೆ ಕನ್ನಡ ಕಾದಂಬರಿಯ ಸಂದರ್ಭದಲ್ಲೂ ಮಾಧ್ಯಮದ ಬಗೆಗಿನ ಕಾಳಜಿ ಕಡಿಮೆಯಾಗಿ, ಪರಿಸರದ ಬಗ್ಗೆ ಲಕ್ಷ್ಯ ಕೇಂದ್ರೀಕೃತವಾಗಿ, ಆಲ್ಟರ್ ಹೇಳಿದ ಮಾತು ನಿಜವಾಯ್ತು ಎಂದು ಅಭಿಪ್ರಾಯ ಪಡಲಾಗಿದೆ. ವಾಸ್ತವದ ಮಾರ್ಗದಲ್ಲಿ ಮೊದಲು ಬಂದ ಕೃತಿಗಳಾದ ಕಾರಂತರ "ಸರಸಮ್ಮನ ಸಮಾಧಿ"ಯಲ್ಲೂ ಮಾಧ್ಯಮದ ಅರಿವು ಸಾಕಷ್ಟು ಇತ್ತು ಎಂದು ಲೇಖಕರು ಹೇಳಿದ್ದಾರೆ. 

'ವಾಸ್ತವದ ಮಾರ್ಗದಲ್ಲಿ' ಅನೇಕ ಒಳ್ಳೆಯ ಕೃತಿಗಳು ಹುಟ್ಟಿಕೊಂಡವು. ಇನ್ನೂ ಹುಟ್ಟಿಕೊಳ್ಳುತ್ತಿವೆ. ಅವುಗಳಲ್ಲಿ ಪ್ರಾತಿನಿಧಿಕ ಸ್ವರೂಪದಲ್ಲಿ ಕೆಲವನ್ನು ಮಾತ್ರ ಉದಾಹರಿಸಲಾಗಿದೆ. 

ಅವೆಂದರೆ: 

  • ಸಮರಸವೇ ಜೀವನ
ಗೋಕಾಕರ ಈ ಕಾದಂಬರಿ ಕರ್ನಾಟಕದ ಸೀಮೋಲ್ಲಂಘನ ಮಾಡಿ ಮಹಾರಾಷ್ಟ್ರ, ಇಂಗ್ಲೆಂಡುಗಳನ್ನು ಪ್ರವೇಶಿಸುತ್ತದೆ ಎಂದು ಲೇಖಕರು ಹೇಳುತ್ತಾರೆ. ಈ ಕೃತಿಕಾರರ ಉದ್ದೇಶ ಭಾಷೆಯಲ್ಲಿ ವಾಸ್ತವವನ್ನು ಹಿಡಿದಿಡುವುದಾಗಿತ್ತು.
  • ಕಾನೂರು ಸುಬ್ಬಮ್ಮ ಹೆಗ್ಗಡತಿ
ಈ ಕಾದಂಬರಿ ಎರಡು, ಮೂರು ತಲೆಮಾರುಗಳನ್ನು ಒಳಗೊಂಡ ಈ ಕಾದಂಬರಿಗಳು, ಇಲ್ಲಿನ ಕರ್ನಾಟಕದ ವಿವಿಧ ಭಾಗಗಳ ಜೀವನ ವೈವಿಧ್ಯವನ್ನು ಪ್ರತಿಬಿಂಬಿಸುತ್ತದೆ.
  • ಮರಳಿ ಮಣ್ಣಿಗೆ
ಈ ಕಾದಂಬರಿಯಲ್ಲಿ ಪ್ರಕೃತಿಯ ವರ್ಣನೆ ಮೇಲಿಂದ ಮೇಲೆ ಬರುತ್ತದೆ. ಆದರೂ ಈ ವರ್ಣನೆಯು ಮಾನವೀಯ ಅರ್ಥವನ್ನು ಸ್ಫುಟಗೊಳಿಸುವುದಕ್ಕಾಗಿ ಬರುವುದರಿಂದ ಔಚಿತ್ಯವನ್ನು ಪಡೆಯುತ್ತದೆ. 

ಲೇಖಕರು ಈ ಮೂರು ಕಾದಂಬರಿಗಳು ವಾಸ್ತವದ ಮಾರ್ಗದ ಕಾದಂಬರಿಗಳೆಂದು ಕರೆದಿದ್ದರೂ, ಮೂರೂ ಕಾದಂಬರಿಗಳಲ್ಲಿ ಒಂದಕ್ಕೊಂದು ಸಾಮ್ಯತೆ ಇರದೇ, ಅವುಗಳಲ್ಲಿ ವೈಯಕ್ತಿಕವಾದ ವಿಭಿನ್ನತೆಯಿದೆ ಎಂದು ಲೇಖಕರು ಗುರುತಿಸಿದ್ದಾರೆ. 

ಲೇಖನದ ಉದ್ಧೃತ ಭಾಗಗಳು
  • ಇಪ್ಪತ್ತನೆಯ ಶತಮಾನದ ಮೂರನೇ ದಶಕದ ಹೊತ್ತಿಗೆ ಕನ್ನಡ ಕಾದಂಬರಿ ಪ್ರಯೋಗ ಸಹಜವಾದ ಅನಿಶ್ಚಿತತೆಯನ್ನು ಕಳೆದುಕೊಂಡು ವಾಸ್ತವದ ರಾಜಮಾರ್ಗವನ್ನು ಆಯ್ದುಕೊಂಡಿತು. ಇದಕ್ಕೆ ಮುಖ್ಯ ಕಾರಣ ಹತ್ತೊಂಬತ್ತನೆಯ ಶತಮಾನದ ಯುರೋಪಿಯನ್ ಕಾದಂಬರಿಯ ಪ್ರಭಾವ.
  • ವಾಸ್ತವದ ಮಾರ್ಗವನ್ನು ಬಿಟ್ಟು ನವ್ಯತೆಯ ಮಾರ್ಗವನ್ನು ಹಿಡಿದ ULYSIS ಕಾದಂಬರಿಯು 1933 ರಲ್ಲೇ ಪ್ರಕಟವಾಗಿತ್ತಾದರೂ, ಭಾರತೀಯ ಶಿಕ್ಷಣ ಪದ್ಧತಿಯ ವೈಚಿತ್ರ್ಯದಿಂದ ಎಲಿಯಟ್, ಡಿಕೆನ್ಸ್ ಮೊದಲಾದವರ ಕಾದಂಬರಿಗಳೇ ನಮಗೆ ಹೆಚ್ಚು ಪರಿಚಿತವಾಗಿದ್ದವು.‌ ಅನೇಕ ಜನರಿಗೆ ಫ್ರೆಂಚ್ ಕಾದಂಬರಿಕಾರರ ಮತ್ತು ಲಿಯೋ ಟಾಲ್ಸ್ಟಾಯ್ ಕೃತಿಗಳ ಪರಿಚಯವೂ ಇದ್ದಿತು.‌
  • ಸ್ವದೇಶಿ ಚಳುವಳಿಯ ಮೂಲಕ ಭಾರತೀಯ ಲೇಖಕರು ತಮ್ಮ ಸಂಸ್ಕೃತಿಯ ಮೂಲದತ್ತ ಲಕ್ಷ್ಯವನ್ನು ತಿರುಗಿಸತೊಡಗಿದರು.‌ ಸಮರಸವೇ ಜೀವನ, ಕಾನೂರು ಸುಬ್ಬಮ್ಮ ಹೆಗ್ಗಡತಿ, ಮರಳಿ ಮಣ್ಣಿಗೆ ಥರದ ವಾಸ್ತವ ಮಾರ್ಗದ ಕಾದಂಬರಿ ಹುಟ್ಟಿದ್ದು ಈ ಸಮಯದಲ್ಲೇ.
  • ಕನ್ನಡ ಕಾದಂಬರಿಗಳ ಸಂದರ್ಭದಲ್ಲಿಯೂ‌ ಇದೇ ಔಚಿತ್ಯ ಕಂಡು ಬರುತ್ತದೆ. ವಾಸ್ತವದ ಮಾರ್ಗವು ಕುವೆಂಪು, ಕಾರಂತ, ಗೋಕಾಕರ ಕಾದಂಬರಿಗಳಲ್ಲಿ ಜೀವಾಳವಾಗಿದೆ‌. ಕೆರೂರು ವಾಸುದೇವಾಚಾರ್ಯರಂತಹಾ ಕೆಲವರು ಐತಿಹಾಸಿಕ ಕಾದಂಬರಿಯೊಡನೆ, ವಾಸ್ತವ ಮಾರ್ಗದ ಕಾದಂಬರಿಗಳನ್ನೂ ಬರೆದರು. 
  • ಅನಕೃ ಅವರ "ಪಂಕಜಾ"ಗಿಂತಲೂ ಕನ್ನಡದ ಮೊಟ್ಟಮೊದಲ ಕಾದಂಬರಿಗಳಲ್ಲಿ ಒಂದಾದ "ವಾಗ್ಧೇವಿ" ಯು ಕನ್ನಡದ ಮೊದಲ Naturalist ಕಾದಂಬರಿಯಾಗಿದೆ. ಎಷ್ಟೋ ಪ್ರಗತಿಶೀಲ ಕಾದಂಬರಿಗಳಲ್ಲಿ ಕಂಡುಬರುವ ನಗ್ನ ವಾಸ್ತವತೆ, ಅನೈತಿಕ ದೃಷ್ಟಿಕೋನ ವಾಗ್ಧೇವಿಯಲ್ಲಿಯೂ ಕಾಣಿಸಿಕೊಂಡಿದೆ.
  • ನಂತರ ವಾಸ್ತವದ ಮಾರ್ಗದಲ್ಲಿ ಅನೇಕರು ಕಾದಂಬರಿಗಳನ್ನು ಬರೆದರು. ಬರೆಯುತ್ತಿದ್ದಾರೆ. ಕೆಲವು ಕೃತಿಗಳೆಂದರೆ ಚಂದ್ರಶೇಖರ ಕಂಬಾರರ ಕರಿಮಾಯಿ ಮತ್ತು ಲಂಕೇಶರ ಮುಸ್ಸಂಜೆಯ ಕಥಾ ಪ್ರಸಂಗ.‌ ಈ ಕಾದಂಬರಿಗಳು ಮಾಧ್ಯಮದ ಬಗೆಗಿನ ಕಾಳಜಿಯನ್ನು ಬಿಟ್ಟು ಪರಿಸರದ ಬಗೆಗೆ ಲಕ್ಷ್ಯ ತೋರಿಸತೊಡಗಿದವು. 

ಉಪಸಂಹಾರ: 

ಜಿ. ಎಸ್.ಅಮೂರ ಅವರ "ವಾಸ್ತವದ ರಾಜಮಾರ್ಗ" ಲೇಖನವನ್ನು ಕುರಿತು ವಿಮರ್ಶಿಸಲಾಗಿದೆ. ಇದು ಮುಖ್ಯವಾಗಿ ಆರಂಭಿಕ ಕಾಲದ ಕನ್ನಡ ಕಾದಂಬರಿಗಳನ್ನು ಕುರಿತು ಹೇಳುವುದಾಗಿದೆ. ಲೇಖಕರು ನವೋದಯ ಮತ್ತು ಪ್ರಗತಿಶೀಲ ಕಾದಂಬರಿಗಳನ್ನು ಪಾಶ್ಚಾತ್ಯ ತತ್ವಶಾಸ್ತ್ರಕ್ಕೆ ಸಮೀಕರಿಸಿ ವಿಮರ್ಶಿಸಿದ್ದಾರೆ. "ವಾಸ್ತವ" ಎಂಬ ತತ್ವ ಕಾದಂಬರಿ ಪ್ರಕಾರದಲ್ಲಿ ಒಡಮೂಡಿದ ರೀತಿಯನ್ನು ಇಲ್ಲಿ ಕಾಣಬಹುದಾಗಿದೆ. 

(ವಿವಿಧ ಮೂಲಗಳಿಂದ)
***********
ಕೆ.ಎ.ಸೌಮ್ಯ, ಮೈಸೂರು

*************
ವಾಸ್ತವದ ರಾಜಮಾರ್ಗ ಲೇಖನದ ಸಾರವನ್ನು ವಿವೇಚಿಸಿ
*************
(ಕನ್ನಡ ಎಂ.ಎ 2007, 2011)

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮುದ್ದಣ ಮನೋರಮೆಯ ಸಲ್ಲಾಪ : ರಾಮಾಶ್ವಮೇಧಂ

ಭಾಷೆಯ ಉಗಮ (origin of language) : ಎಂ.ಎ.ಕನ್ನಡ