ಕೋಡಿಮಠ ಒಂದು ಸಾಂಸ್ಕೃತಿಕ ಕೇಂದ್ರ
ಪೀಠಿಕೆ :
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯ ಕೇದಾರೇಶ್ವರ ದೇವಸ್ಥಾನದ
ಪ್ರಾಕಾರದಲ್ಲಿ ಇರುವ ಅನೇಕ ಶಿಲಾಶಾಸನಗಳಲ್ಲಿ ಇದೂ ಒಂದು.
ಶಾಸನ : ಕೋಡಿಮಠದ ಶಾಸನ
ಶಾಸನ ದೊರೆತ ಸ್ಥಳ : ಶಿವಮೊಗ್ಗ ಜಿಲ್ಲೆಯ
ಶಿಕಾರಿಪುರ
ತಾಲ್ಲೂಕಿನ ಬಳ್ಳಿಗಾವೆ
ಶಾಸನದ ಕಾಲ : ಕ್ರಿ ಶ 12 ನೇ ಶತಮಾನ
ಶಾಸನದ ಎತ್ತರ : 8 ಅಡಿ ಎತ್ತರ
4 ಅಡಿ 3 ಅಂಗುಲ ಅಗಲ
ಕಂಡುಹಿಡಿದವರು : ಬಿ. ಎಲ್. ರೈಸ್
ಪ್ರಕಟಿಸಿದ ವರ್ಷ : 1902
ನಂತರ ಶಿವನು ದೊರೆ ಬಿಜ್ಜಳನ ಆಸೆಗಳನ್ನು ಪೂರೈಸಲಿ ಎಂಬ ಆಶಯ ಪದ್ಯವಿದೆ. ಕಲಚುರಿ ದೊರೆ ಬಿಜ್ಜಳನ ಬಿರುದುಗಳನ್ನು ಕೂಡ ಶಾಸನ ತಿಳಿಸುತ್ತದೆ.
'ಕಸಪಯ್ಯ ನಾಯಕ' ಬಿಜ್ಜಳನ ಕೈ ಕೆಳಗಿನ ಅಧಿಕಾರಿ. ಆತನನ್ನು ಬಣ್ಣಿಸುವ ಹಲವು ಪದ್ಯಗಳಿವೆ. ನಂತರ ಶಾಸನವು ಬಳ್ಳಿಗಾವೆಯ ಕೋಡಿಮಠದ ಶ್ರೇಷ್ಠತೆಯ ಬಗ್ಗೆ ತುಂಬಾ ಮನೋಹರವಾಗಿ ವರ್ಣಿಸುತ್ತದೆ. ದೊರೆ ಬಿಜ್ಜಳನು ದಕ್ಷಿಣದ ವಿಜಯ ಕೈಗೊಂಡು, ಬಳ್ಳಿಗಾವೆಯಲ್ಲಿ ಬೀಡು ಬಟ್ಟಾಗ ಎಲ್ಲಾ ಅಧಿಕಾರಿಗಳು ಒಂದುಗೂಡಿ ಬಿಜ್ಜಳನನ್ನು ಕಂಡರು.
ಕಸಪಯ್ಯ ನಾಯಕನು ಮಠದ ಹಿರಿಮೆಯನ್ನು ದೊರೆಗೆ ತಿಳಿಸಿದನು. ನಂತರ ಅಂತಹ ಮಹಿಮಾನ್ವಿತ ಸ್ಥಳದಲ್ಲಿ ಧರ್ಮಕಾರ್ಯವೊಂದನ್ನು ಮಾಡುವಂತೆ ದೊರೆಯಲ್ಲಿ ಭಿನ್ನವಿಸಿಕೊಳ್ಳುತ್ತಾನೆ. ಅವನ ಕೋರಿಕೆಗೆ ಸ್ಪಂದಿಸಿದ ಬಿಜ್ಜನು, ವಾಮಶಕ್ತಿ ಮುನಿಯ ಕಾಲು ತೊಳೆದು, ಕಿರಿಗೇರಿ ಗ್ರಾಮವನ್ನು ದಕ್ಷಿಣ ಕೇದಾರೇಶ್ವರ ದೇವಾಲಯದಲ್ಲಿನ ಪೂಜೆಗೆ, ಋಷಿಗಳ ಸೇವೆಗೆ, ದೇವಸ್ಥಾನದ ದುರಸ್ತಿ ಕಾರ್ಯ, ಅನ್ನ ಸಂತರ್ಪಣೆ ಹಾಗೂ ವಿದ್ಯಾಭ್ಯಾಸಕ್ಕೆ ನೀಡುತ್ತಾನೆ.
ಪ್ರಸ್ತುತ ಶಾಸನವು ಕಲಚುರಿ ದೊರೆ ಬಿಜ್ಜಳನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ.
ಕೋಡಿಮಠ- ಒಂದು ಸಾಂಸ್ಕೃತಿಕ ಕೇಂದ್ರ :
ಬಳ್ಳಿಗಾವೆಯು ಕ್ರಿ.ಶ 11 ನೇ ಮತ್ತು ಕ್ರಿ.ಶ 12 ನೇ ಶತಮಾನದಲ್ಲಿ ಅತ್ಯಂತ ಪ್ರಸಿದ್ಧಿ ಹೊಂದಿದ ಸ್ಥಳವಾಗಿತ್ತು, ದೊಡ್ಡ ಪಟ್ಟಣವಾಗಿ ಖ್ಯಾತ ವಿದ್ಯಾ ಕೇಂದ್ರವಾಗಿ, ಹಲವು ಮಠವಿರುವ-ದೇವಾಲಯ ಇರುವ ಸ್ಥಳವಾಗಿ, ವ್ಯಾಪಾರಿ ಕೇಂದ್ರವಾಗಿ ಮೆರೆಯುತ್ತಿತ್ತು ಎಂದು ಶಾಸನಗಳಿಂದ ತಿಳಿದು ಬರುತ್ತದೆ. ಬಳ್ಳಿಗಾವೆಯು ಎಲ್ಲಾ ಧರ್ಮಗಳ ನೆಲೆಯಾಗಿದ್ದಿತು.
ಕೋಡಿಮಠವು ಪ್ರಸಿದ್ಧ ವಿದ್ಯಾಕೇಂದ್ರವಾಗಿಯೂ ಖ್ಯಾತಿ ಪಡೆದಿತ್ತು.
ಈ ಮಠದ ಪ್ರಾಚೀನತೆಯನ್ನು ಡಾ. ವೆಂಕಟ ಸುಬ್ಬಯ್ಯ ಅವರು ಕ್ರಿ.ಶ. 1073 ಎಂದು ನಿರ್ಣಯಿಸಿದರೆ, ಡಾ. ಚಿದಾನಂದ ಮೂರ್ತಿ ಅವರು ಕ್ರಿ.ಶ. 1060 ಎಂದು ಭಾವಿಸಿದ್ದಾರೆ. ಒಟ್ಟಿನಲ್ಲಿ ಹನ್ನೊಂದನೇ ಶತಮಾನದ ಉತ್ತರಾರ್ಧ ಎನ್ನಬಹುದು.
ಇದನ್ನು ಕೇದಾರ ಶಕ್ತಿ ಸ್ಥಾಪಿಸಿದ್ದರಿಂದ ಕೇದಾರ ಮಠ ಎಂದು ಕೂಡ ಕರೆಯುತ್ತಾರೆ.
ಈ ಮಠವು ಹೀಗಿದ್ದಿರಬೇಕು :
- ಪೂಜೆಗೆ ಅವಕಾಶ ಇರುವ ದೇವಾಲಯ
- ತಪಸ್ವಿಗಳಿಗೆ ಸಾಧನಾ ನಿಲಯ
- ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯಾಲಯ
- ಬಡಬಗ್ಗರಿಗೆ, ಹಸಿದವರಿಗೆ ಪ್ರಸಾದ ನಿಲಯ
- ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ಅನುಕೂಲ ಇರುವ ವಿದ್ಯಾಲಯ
- ವಿದ್ಯಾರ್ಥಿ ತಪೋಧನರು
- ವಿದ್ಯಾರ್ಥಿ ಮಾಣಿಯರು