ಶಾಸನ ಸಾಹಿತ್ಯದಲ್ಲಿ ದೇಕಬ್ಬೆ ಶಾಸನದ ಸ್ಥಾನ
ಪೀಠಿಕೆ : ಶಾಸನಗಳಲ್ಲಿ ಹಲವು ಪ್ರಕಾರಗಳುಂಟು. ಅದರಲ್ಲಿ ಆತ್ಮಬಲಿಯೂ ಒಂದು. ಬೇರೆ ಬೇರೆ ಕಾರಣಗಳಿಗಾಗಿ ಪ್ರಾಣತ್ಯಾಗ ಮಾಡುತ್ತಿದ್ದ ಅನೇಕ ಉದಾಹರಣೆಗಳುಂಟು. ಅವರಿಗೆ ಹಾಕಿಸುತ್ತಿದ್ದ ಶಾಸನಗಳಿಗೆ ಸ್ಮಾರಕ ಶಾಸನ ಎಂದು ಹೆಸರು. ವೀರರ ಪತ್ನಿಯರು ಸಹಗಮನ ಪ್ರಕಾರ ಮರಣ ಹೊಂದುತ್ತಿದ್ದರು. ಆಗ ಅವರಿಗೆ ಹಾಕಿಸುತ್ತಿದ್ದ ಸ್ಮಾರಕಗಳನ್ನು ಮಹಾಸತಿಕಲ್ಲು ಅಥವಾ ಮಾಸ್ತಿಕಲ್ಲು ಎಂದು ಕರೆಯುತ್ತಿದ್ದರು. "ದೇಕಬ್ಬೆಯ ಶಾಸನ ಅಂತಹಾ ಒಂದು ಮಾಸ್ತಿಕಲ್ಲು" ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಬೆಳತೂರು ಗ್ರಾಮದ ಅಡ್ಡಕಟ್ಟೆ ಹೊಲದಲ್ಲಿರುವ ಮಹಾಸತಿ ಶಾಸನವನ್ನು ಪತ್ತೆ ಹಚ್ಚಿದವರು ಬಿ.ಎಲ್.ರೈಸ್. ' ಎಪಿಗ್ರಾಫಿಯಾ ಕರ್ನಾಟಿಕಾ'ದ ಎರಡನೇ ಎರಡನೇ ಸಂಪುಟದಲ್ಲಿ ಶಾಸನದ ಪಠ್ಯವನ್ನು ಪ್ರಕಟಿಸಿದರು. ನಂತರ ರೆವೆರೆಂಡ್ ಕಿಟ್ಟೆಲ್ ರವರು ಈ ಶಾಸನವನ್ನು ಎಪಿಗ್ರಾಫಿಯಾ ಇಂಡಿಕಾ ದಲ್ಲಿ ಪ್ರಕಟಿಸಿದರು. ಈ ಶಾಸನದ ವಿಶೇಷತೆಯೆಂದರೆ ಇದು ಬೇರೆ ಶಾಸನಗಳಂತೆ ದೇವತಾ ಶ್ಲೋಕದಿಂದ ಪ್ರಾರಂಭವಾಗುವುದಿಲ್ಲ. ಗದ್ಯಕ್ಕಿಂತ ಪದ್ಯಭಾಗವೇ ಇದರಲ್ಲಿ ಹೆಚ್ಚು. ಇದರಲ್ಲಿ ಒಟ್ಟು 23 ಪದ್ಯಗಳಿವೆ. ದೇಕಬ್ಬೆಯು ತನ್ನ ಪತಿಯ ಮರಣದ ಸುದ್ದಿ ಕೇಳಿದ ತಕ್ಷಣ ಇಹಲೋಕವನ್ನು ತ್ಯಜಿಸಲು ಸಿದ್ಧಳಾದಳು. ಚಿತೆಯನ್ನು ಸಿದ್ಧಪಡಿಸಿ ಉರಿಯುತ್ತಿದ್ದ ಚಿತೆ ಹೊಕ್ಕಳು. ತನ್ನ ಮಗಳ ಸ್ಮಾರಕವಾಗಿ ಆಕೆಯ ತಂದೆ ಶಾಸನ ಸಹಿತವಾದ ಈ ಶಿಲಾಸ್ತಂಭವನ್ನು ಮಾಡಿಸಿದ.