ಬ್ರೇಕಪ್ ನೋವು ಎನಿಸಲೇ ಇಲ್ಲ (VK 2.6.19)





ಬ್ರೇಕಪ್ ಆಗಿದೆ.....!!!

ಹೌದು. ವಿಧಿಯಿಲ್ಲ ಒಪ್ಪಿಕೊಳ್ಳಲೇಬೇಕು. ಅವನನ್ನು ಮರೆತು ಹೊಸ ಜೀವನ ಶುರು ಮಾಡಲೇ ಬೇಕು. ಘಳಿಗೆ ಘಳಿಗೆಗೂ ನೆನಪಾಗುತ್ತಿದ್ದ ಅವನ ನೆನಪು ಈಗಿಲ್ಲ. ಆದರೆ ನನ್ನ ಪ್ರೀತಿ ನೆನೆದು ಬಹಳ ನೋವಾಗುತ್ತಿದೆ. ಪ್ರತೀ ಬಾರಿಯೂ ನಮ್ಮಿಬ್ಬರ ನಡುವೆ ಜಗಳವಾದಾಗ ನಾನೇ ಮುಂದಾಗಿ ಅವನನ್ನು ಮಾತನಾಡಿಸಿಬಿಡುತ್ತಿದ್ದೆ. ಆದರೆ ಈ ಬಾರಿ ಯಾಕೋ ಹಾಗೆ ಮಾಡಬೇಕು ಅಂತ ಅನ್ನಿಸುತ್ತಿಲ್ಲ. ಇವನೊಂದಿಗೆ ಇದ್ದು ಕಣ್ಣೀರು ಹಾಕುವುದಕ್ಕಿಂತ ದೂರಾಗುವುದೇ ಒಳ್ಳೆಯದು ಎನಿಸುತ್ತಿದೆ.

ಆದರೆ ಹಾಗೆ ನಿರ್ಧಾರ ಮಾಡುವುದು ಸುಲಭ. ಅದರಂತೆ ನಡೆದುಕೊಳ್ಳುವುದು ಕಷ್ಟ. ಈ ಮನಸ್ಸೋ... ಕ್ಷಣಕ್ಕೊಂದು ಬಾರಿ ಬಣ್ಣ ಬದಲಾಯಿಸುತ್ತದೆ. ಒಮ್ಮೆ ಅವನು ಮಾಡಿದ್ದು ಸರಿ ಎಂದರೆ, ಮತ್ತೊಮ್ಮೆ ನಾನು ಮಾಡಿದ್ದೇ ಸರಿ ಎನ್ನುತ್ತದೆ. ಯಾರು ಸರಿಯೋ ಯಾರು ತಪ್ಪೋ? ನನ್ನ ಮನಸ್ಸಿಗೆ ನೋವಾದದ್ದಂತೂ ನಿಜ ತಾನೇ? ಅಂತ ಹೇಳಿಕೊಂಡು ಅದರ ಬಾಯಿ ಮುಚ್ಚಿಸುತ್ತೇನೆ. ಈಗ ಅವನ ಅನುಪಸ್ಥಿತಿಯಲ್ಲಿ ಮನಸ್ಸು ಹಿಂದೆ ನಡೆದದ್ದನ್ನೇ ನೆನೆಸುತ್ತಾ ಕೊರಗದಂತೆ ಮಾಡಲು ದಾರಿ ಹುಡುಕಬೇಕಿದೆ.

ಒಮ್ಮೊಮ್ಮೆ ಈ ಮನಸ್ಸು ಸಹ ಯಾವುದೇ ವಿಲನ್ನಿಗೂ ಕಡಿಮೆ ಇಲ್ಲದ ಹಾಗೆ ಐಡಿಯಾ ಕೊಡುತ್ತದೆ. 'ಅವನಿಲ್ಲದಿದ್ರೆ ಏನಂತೆ, ಅವನಂತಹಾ ನೂರಾರು ಹುಡುಗರು ಸಿಗ್ತಾರಪ್ಪ' ಅಂತ ನಮ್ಮನ್ನೇ ಹಳ್ಳಕ್ಕೆ ಬೀಳಿಸಲು ನೋಡುತ್ತದೆ. ಆದರೆ ಯಾರನ್ನೋ ಮರೆಯಲು ನಾವು ಮತ್ಯಾರನ್ನೋ ಇಷ್ಟ ಪಡುವುದು ಇದಕ್ಕೆ ಪರಿಹಾರ ಎಂದು ಅನ್ನಿಸುವುದಿಲ್ಲ. ಏಕೆಂದರೆ ನೊಂದ ಮನಸ್ಸು ಕದಡಿದ ಕೊಳದ ಹಾಗೆ. ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗದೇ ಚಡಪಡಿಸುತ್ತಿರುತ್ತದೆ. ಅಂತಹಾ ಸಮಯದಲ್ಲಿ ಬೇರೆ ಯಾರದೋ ಮೇಲಿನ ಕೋಪಕ್ಕೆ ಮುಂದಾಲೋಚನೆ ಇಲ್ಲದೇ ಮತ್ಯಾರನ್ನೋ ನಮ್ಮ ಜೀವನದೊಳಗೆ ಬಿಟ್ಟುಕೊಂಡರೆ ಕಡೆಗೆ ಅವನೂ ಇಲ್ಲದೇ, ಇವನೂ ಇಲ್ಲದೇ ನೋವು ಅನುಭವಿಸಬೇಕಾದವರು ನಾವೇ.

ಅವನನ್ನು ಮರೆಯಲು ಮತ್ತೊಬ್ಬರನ್ನು ಪ್ರೀತಿಸಿದರೆ ಈ ಮೊದಲು ಅವನನ್ನು ಪ್ರೀತಿಸಿದ್ದೇ ನೆನಪಾಗಿ ಮತ್ತಷ್ಟು ನೋವಾಗುತ್ತದೆ. ಬದಲಿಗೆ ಈ ಪ್ರೀತಿ ಅನ್ನುವುದನ್ನೇ ಮರೆತು ಬಿಡಬೇಕು ಅಂತಹಾ ಕೆಲಸದಲ್ಲಿ ತೊಡಗಿಕೊಳ್ಳಬೇಕು ಅಂತ ನಿರ್ಧರಿಸಿದೆ. ಆದರೆ ಆಫೀಸಿನ ಕೆಲಸದಲ್ಲಿ ಮೈ ಮರೆತಿದ್ದಾಗಲೂ ಈ ವಿಷಯ ನೆನಪಾಗಿ ಕಿರಿಕಿರಿಯಾಗತೊಡಗಿತು. ನಾನು ಕೆಲಸ ಮಾಡುತ್ತಿದ್ದಾಗಲೂ ನೆನಪಾಗುತ್ತದೆ ಎಂದರೆ ದೇಹಕ್ಕೆ ಮಾತ್ರವೇ ಕೆಲಸ ಸಿಗುವುದು, ಮನಸ್ಸು ಯಾವುದೇ ಕೆಲಸ ಇಲ್ಲದೇ ಫ್ರೀ ಆಗಿರುತ್ತದೆ ಅಂತ ಜ್ಞಾನೋದಯವಾಯ್ತು.

ಹಾಗಾದರೆ ಮೊದಲು ಮನಸ್ಸಿಗೆ ಕೆಲಸ ಕಲಿಸಬೇಕು. ಆಗಲೇ ಅದು ತನ್ನೆಲ್ಲಾ ಯೋಚನೆಗಳನ್ನು ಬಿಟ್ಟು ಹಾಯಾಗಿರಲು ಸಾಧ್ಯ. ಮನಸ್ಸನ್ನು ಬ್ಯುಸಿ ಆಗಿ ಇಡುವುದು ಹೇಗೆ? ಮಿಲಿಯನ್ ಡಾಲರ್ ಪ್ರಶ್ನೆಯಾಯಿತು. ಮಹಾಭಾರತ ಯುದ್ಧದಲ್ಲಿ ಅರ್ಜುನ ಕೃಷ್ಣನಿಗೆ 'ಮನಸ್ಸನ್ನು ಕಟ್ಟಿ ಹಾಕುವುದು ಹೇಗೆ?' ಅಂತ ಕೇಳಿದನಂತೆ. ನನಗೆ ಕಟ್ಟಿ ಹಾಕುವುದೇನೂ ಬೇಕಿರಲಿಲ್ಲ. ಏಕೆಂದರೆ ಬಲವಂತವಾಗಿ ಕಟ್ಟಿದ ಮನಸ್ಸು ಒಂದಲ್ಲ ಒಂದು ದಿನ ಸಿಡಿದು ಬೀಳುತ್ತದೆ. ನನಗೆ ನನ್ನ ದಾರಿಯಲ್ಲಿಯೇ ಅವನ ನೆನಪಾಗದಂತೆ ತನ್ನ ಪಾಡಿಗೆ ತಾನಿರುವ ಮನಸ್ಸು ಬೇಕಿತ್ತು. 

ನನಗೇನು ಇಷ್ಟ?

ನನ್ನನ್ನೇ ಕೇಳಿಕೊಂಡೆ. ಸಿನೆಮಾಗಳೆಂದರೆ ಬಹಳ ಇಷ್ಟ ಅಂತ ನೆನಪಾಯ್ತ. ಇನ್ನೇನು ತಡ. ಮೊಬೈಲಿನಲ್ಲಿ ಸಮಯ ಸಿಕ್ಕಾಗಲೆಲ್ಲಾ ಸಿನೆಮಾ ನೋಡಲು ಪ್ರಾರಂಭಿಸಿದೆ. ಒಂದೊಳ್ಳೆಯ ಸಿನೆಮಾ ನೋಡಿದ ಖುಷಿಯ ಮೂಡಿನಲ್ಲಿದ್ದಾಗ ಬ್ರೇಕಪ್ ವಿಷಯ ನೆನಪಾದರೂ ಮನಸ್ಸಿಗೆ ನೋವಾಗುತ್ತಿರಲಿಲ್ಲ. ಹಾಗೆಯೇ ಮನೆಯಲ್ಲಿ ಸುಮ್ಮನೆ ಕೂತಿರುವ ಬದಲು ಬಟ್ಟೆಯ ಮೇಲೆ ಚಿಕ್ಕಪುಟ್ಟ ಕಸೂತಿ ಮಾಡತೊಡಗಿದೆ. ಅದನ್ನು ನೋಡಿ ಎಲ್ಲರೂ ಹೊಗಳಿದ ದಿನ ನಾನಾಗಿಯೇ ನೆನೆಸಿಕೊಂಡರೂ ಅವನ ನೆನಪಾಗುತ್ತಿರಲಿಲ್ಲ. ಅದೇ ಖಾಲಿ ಕೂತಾಗ ಮಾತ್ರ ಅವನ ನೆನಪಾಗುತ್ತಿತ್ತಲ್ಲದೇ ಮನಸ್ಸಿಗೂ ತುಂಬಾ ಕಿರಿಕಿರಿಯಾಗುತ್ತಿತ್ತು.

ಹಾಗಾದರೆ ಈ ಪ್ರೀತಿ ಅನ್ನೋದೆಲ್ಲಾ ಸುಳ್ಳಾ? ನನ್ನನ್ನು ಯಾರಾದರೂ ಹೊಗಳಿದರೆ ಅಥವಾ ನನ್ನಗಿಷ್ಟವಾದದ್ದು ಮಾಡಿದರೆ ಮನಸ್ಸಿಗೆ ಬಹಳ ಖುಷಿಯಾಗಿ ಜೀವನದಲ್ಲಿ ಏನೇ ಕೊರತೆ ಇದ್ದರೂ ಮುಚ್ಚಿಹೋಗುತ್ತದಲ್ಲ.... ಹೇಗೆ? ಅಂದರೆ ನನ್ನದೂ ಸ್ವಾರ್ಥವೇ.. ನಾವು ಒಬ್ಬರನ್ನು ಪ್ರೀತಿಸಬೇಕು.. ಅವರು ನಮ್ಮನ್ನ ಬಿಟ್ಟು ಇರಲಾರದವರ ಹಾಗೆ ನಮ್ಮ ಹಿಂದೆ ಮುಂದೆ ಸುಳಿಯಬೇಕು.. ಸದಾ ನಮ್ಮನ್ನು ಅವರು ಹೊಗಳುತ್ತಿರಬೇಕು... ಆಗ ನಮ್ಮ ಮನಸ್ಸಿಗೆ ಸಂತೋಷವಾಗುತ್ತದೆ. ಕೇವಲ ನನ್ನ ಮನಸ್ಸಿನ ಖುಷಿಗಾಗಿ ನಾನೂ ಪ್ರೀತಿಸಿದೆನಾ? ಬೇರೆ ಯಾರೋ ನನ್ನನ್ನು ಹೊಗಳಿದಾಗ ಅವನನ್ನೇ ಮರೆಯುವಷ್ಟು ಈ ಮನಸ್ಸು ಸ್ವಾರ್ಥಿಯಾಯಿತಾ?

ಯಾಕೋ ನಂಬಲಾಗಲಿಲ್ಲ.

ಸ್ವಲ್ಪ ದಿನ ಕಳೆದ ನಂತರ ಒಂದು ದಿನ ಅವನ ಮೆಸೇಜ್ ಬಂದಿತು. ಅಬ್ಬ!!! ಅವನಿಗೆ ನನ್ನ ನೆನಪಾಗಿದೆ ಅಂತ ಭಯಂಕರ ಖುಷಿಯಾಯ್ತು. ಹೀಗೆ ಮೆಸೇಜ್ ಮುಂದುವರೆಯುತ್ತಾ ನಮ್ಮಿಬ್ಬರ ನಡುವೆ ಪ್ರೀತಿ ಮತ್ತೊಮ್ಮೆ ಶುರುವಾಯಿತು. ಮತ್ತೆ ಅವನ ಓಲೈಕೆ, ಜಗಳ, ಮುನಿಸು, ಸಮಾಧಾನಿಸುವುದು ಎಲ್ಲವೂ ಶುರುವಾದವು. ಈ ಜಗಳ ಮತ್ತೊಮ್ಮೆ ತಾರಕಕ್ಕೇರಿ ಮತ್ತೆ ಬ್ರೇಕಪ್ ಆಗುವುದರಲ್ಲಿ ಯಾವುದೇ ಅನುಮಾನ ಇರಲಿಲ್ಲ. ಆದರೆ ಹಾಗಾದಾಗ ಮನಸ್ಸಿಗೆ ನೋವಾಗದ ಹಾಗೆ ಹೇಗೆ ಸಮಯ ಕಳೆಯಬೇಕು ಅಂತ ನನಗೆ ಗೊತ್ತಾಗಿತ್ತಲ್ಲ. ಹೇಗಿದ್ದರೂ ಇಂದಲ್ಲ ನಾಳೆ ಇವನು ಹಿಂತಿರುಗಿ ಬಂದೇ ಬರುತ್ತಾನೆ. ಅಲ್ಲಿಯವರೆಗೂ ಎಲ್ಲರಿಂದ ಸ್ವಲ್ಪ ಹೊಗಳಿಸಿಕೊಂಡು ಒಳ್ಳೆಯವಳಾಗುವ ಅಂತ ತೀರ್ಮಾನಿಸಿದೆ.

ಈ ಒಳ್ಳೆಯವಳಾಗುವ ಹುಚ್ಚಿನ ಮುಂದೆ ಬ್ರೇಕಪ್ ನೋವು ಅನ್ನಿಸಲೇ ಇಲ್ಲ......

**********
Published in Vijaya Karnataka Sunday (tumkur edition) on 2.6.19

ಕೆ.ಎ.ಸೌಮ್ಯ
ಮೈಸೂರು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)